ಎಷ್ಟೇ ದೊಡ್ಡವರಾದ್ರೂ ಬಿಡಲ್ಲ, ನೋಯ್ಡಾ ಮಾದರಿಯಲ್ಲಿ ಸ್ಫೋಟಕ ಇಟ್ಟು ನೆಲಸಮ ಮಾಡ್ತೀವಿ | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಎಷ್ಟೇ ದೊಡ್ಡವರು ಇದ್ದರೂ ತೆರವು ಮಾಡುತ್ತೇವೆ. ನೋಯ್ಡಾ ಮಾದರಿಯಲ್ಲಿ ಅಕ್ರಮ ಕಟ್ಟಡಗಳಿಗೆ ಸ್ಫೋಟಕ ಇಟ್ಟು ನೆಲಸಮಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಐಟಿಯ 30 ಕಂಪನಿಗಳು ಒತ್ತುವರಿ ಮಾಡಿವೆ. ಪ್ರತಿ ಸರ್ಕಾರಗಳು ಬಹಳ ನಾಟಕ ಮಾಡ್ತಾ ಇದ್ದವು. ಮಳೆ ನಿಂತ ಬಳಿಕ ಡೆಮಾಲಿಶ್ ನಿಂತು ಹೋಗುತ್ತಿತ್ತು. ನಮ್ಮ ಇಲಾಖೆ ಪಟ್ಟಿ ರೆಡಿ ಮಾಡಿ, ಬಿಬಿಎಂಪಿಗೆ ಕೊಟ್ಟಿದೆ. ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳಿದರು.
ಐಟಿ-ಬಿಟಿ ಕಂಪನಿಗಳಿಗೆ ಯಾವ ವಿನಾಯಿತಿಯೂ ಇಲ್ಲ, ದೊಡ್ಡವರು ಚಿಕ್ಕವರು ಅಂತ ನೋಡಲ್ಲ. ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ಜಂಟಿ ಕಾರ್ಯಾಚರಣೆ ಮಾಡುತ್ತಿವೆ. ನೆರೆ ನಮಗೆ ಪಾಠ ಕಲಿಸಿದೆ. ಬಾಗಮನೆ ಪಾರ್ಕ್ಗೆ ಯಾವುದೇ ವಿನಾಯಿತಿ ಕೊಟ್ಟಿಲ್ಲ. ದೊಡ್ಡವರು ಚಿಕ್ಕವರು ಅಂತ ನೋಡಲ್ಲ ಎಂದು ಸಚಿವರು ಹೇಳಿದ್ದಾರೆ.
ಐಟಿ ಕಂಪನಿಗಳು ಒತ್ತುವರಿ ಮಾಡಿವೆ, ಬಿಲ್ಡರ್ಗಳು ಒತ್ತುವರಿ ಮಾಡಿದ್ದಾರೆ. ಬಡವರು, ಶ್ರೀಮಂತರು, ಸಾಹುಕಾರ, ಮಧ್ಯಮ ವರ್ಗ ಅಂತ ನೋಡಲ್ಲ. ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದ್ದೀನಿ. ಯಾರಿಗೂ ಕಾಲಾವಕಾಶ ನೀಡಲ್ಲ. ಕೋರ್ಟ್ಗೂ ನಾವು ವಿನಂತಿ ಮಾಡ್ತೀವಿ. ಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದೆ. ಕೆವಿಯಟ್ ಹಾಕುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡ್ತೀವಿ. ಎಜಿ ಬಳಿಯೂ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಎಂದರು.
ಮುಂದಿನ ವರ್ಷ ಮಳೆಗಾಲ ಬರುವುದರೊಳಗೆ ನಾವು ಬಾಕಿ ಇರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು. ಅಧಿಕಾರಿಗಳು ಮತ್ತು ಬಿಲ್ಡರ್ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದರು.
ರಾಜಕಾಲುವೆ ಒತ್ತುವರಿಯಾಗಿರುವ ಕಟ್ಟಡಗಳ ಬಗ್ಗೆ ಬಿಬಿಎಂಪಿ ಪಟ್ಟಿ ಮಾಡಿದ್ದು, 600 ಒತ್ತುವರಿ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ಕಾರ್ಯ ಮುಂದುವರೆದಿದ್ದು, ಮಹದೇವಪುರ ಭಾಗದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದೆ. ಪ್ರತಿಷ್ಠಿತ ವಿಲ್ಲಾಗಳು, ಶಿಕ್ಷಣ ಸಂಸ್ಥೆ, ಮನೆಗಳು ಒತ್ತುವರಿ ಕಾರ್ಯಾಚರಣೆಗೆ ನೆಲಸಮವಾಗುತ್ತಿವೆ.